ತೆರೆ ಸರಿಯಿತು…

ಹೊರಳಾಡಿದ, ಹೊರಳಾಡಿದ, ಮಲಗಲಾಗಲಿಲ್ಲ, ಇನ್ನು ತಡೆಯಲಾಗದೆ ಎದ್ದು ಕುಳಿತ. ಕೋಣೆಯ ಗಡಿಯಾರ, ಬೆಳಗಿನ ಜಾವ ನಾಲ್ಕು ಗಂಟೆ ತೋರಿಸುತಿತ್ತು. ಕೋಣೆಯಿಂದ ಹೊರ ಬಂದು ಹಾಲಿನ ಸೋಫಾದ ಮೇಲೆ ಕುಳಿತ. ಗಡಿಯಾರವು ಕಟ ಕಟ ಶಬ್ಧ ಮಾಡುತಿತ್ತು. ಗೋಡೆಯ ಮೂಲೆಯೊಂದರಿಂದ ಹಲ್ಲಿಯು ಲೊಚಗುಟ್ಟುತ್ತಿತ್ತು. ಗಾಡಾಂಧಕಾರ, ಗಾಢಮೌನ, ಅದರೆ ಮನಸಿನಲ್ಲಿ ಭಾವನೆಗಳ ಏರಿಳಿತ, ದ್ವಂದ್ವಗಳ ಹೊಡೆದಾಟ, ಅಲ್ಲೋಲ ಕಲ್ಲೋಲ.

ಭಟ್ಟರು ಎದ್ದು ಬಂದು ಹಾಲಿನ ದೀಪ ಹಾಕಿದರು, ಬೇಗನೆ ಹಾಲನ್ನು ಬಿಸಿಗಿಟ್ಟು, ಬಿಸಿಯಾದ ಹಾಲನ್ನು ತಂದು ಅವನ ಮುಂದಿಟ್ಟರು. ಅವರಿಗೂ ಕಾಡುತಿತ್ತು, ಪ್ರಶ್ನೆ ಇಷ್ಟ್ಟು ಬೇಗನೆಯೇಕೆ ಎದ್ದ. ಭಟ್ಟರು ಅಲ್ಲಿಯೇ ನಿಂತಿದ್ದರು, ಅವನು ಹಾಲನ್ನು ಗಟ ಗಟನೆ ಕುಡಿದು ಲೋಟವನ್ನು ಅಲ್ಲಿಯೇ ಕುಕ್ಕಿದ. ಗಡಿಯಾರ ಶಬ್ದ ಮಾಡುತ್ತಲೇಇತ್ತು, ಗೋಡೆಯ ಮೇಲಿನ ಹಲ್ಲಿ ಲೊಚಗುಟ್ಟುತಿತ್ತು. ಜಗವೆಲ್ಲ ಮಲಗಿರಲು ಇವನೊಬ್ಬನೆದ್ದಿದ್ದ, ಕಾರಣ…….ಧಡಾರನೆ ಎದ್ದು ತನ್ನ ಕೋಣೆಯನ್ನು ಸೇರಿ ಬಾಗಿಲನ್ನು ಮುಚ್ಹಿದ.

ಆದರೂ ಕಾಡುತಿತ್ತು, ಅವಳ ಮುಂಗುರುಳು, ಅವಳ ಕಂಠ, ಅವಳ ನಡಿಗೆ, ಅವಳ ಸುಕೋಮಲ ದೇಹ. ಪ್ರೇಮವೋ, ಕಾಮವೋ ಅವಳ ಮೋಹಪಾಶದಲ್ಲಿ ಬಿದ್ದಾಗಿತ್ತು. ಎದ್ದು ಬರಲಾಗುತ್ತಿಲ್ಲ, ಅದರೆ ಅದರಲ್ಲೇ ಇರಲು ಮನಸೊಪ್ಪುತ್ತಿಲ್ಲ. ಥೂ….ಎಂದು ಕೂಗಿದ, ಮೇಜನ್ನು ಕೋಪದಿಂದ ಗುದ್ದಿದ.

ತಾನು ನಂಬಿಕೊಂಡ ಆದರ್ಶವೆಲ್ಲ ಏನಾಯಿತು? ಮನೋನಿಗ್ರಹ, ನಿಸ್ವಾರ್ಥ ಸೇವೆ, ಆತ್ಮಸಾಕ್ಶಾತ್ಕಾರ, ಎಲ್ಲಾ ಹಾರಿಹೋಗುತ್ತಿದೆಯೇ? “ಇಲ್ಲ, ಹಾಗಾಗಬಾರದು” ಎಂದಿತು ಮನಸ್ಸು. ಅದೇ ಮನಸ್ಸು ಮತ್ತೊಂದು ಕಡೆಯಿಂದ ಕೂಗಿತು..”ಪ್ರೀತಿಯ ಕರೆ, ನಿರ್ಲಕ್ಶಿಸಬೇಡ, ಪ್ರೀತಿ ಶಾಶ್ವತ” ಇವನು ಜೋರಾಗಿಯೇ ಕೂಗಿದ, ” ಇದು ಪ್ರೇಮವಲ್ಲ, ಬರೇ ಕಾಮ! ಕಾಮ!”,… “ಹಾಗಾದರೆ ಇದರಿಂದ ನಿನಗೆ ಖಂಡಿತಾ ಎದ್ದು ಬರಲಾಗುವುದಿಲ್ಲ…” ಎಂದು ಹೇಳಿ ಗಹ ಗಹಿಸಿ ನಕ್ಕಿತು.

“ಹೌದು ಇದು ಬರೆಯ ಕಾಮ, ಅದರೂ ಇದರಿಂದೇಕೆ ನನಗೆ ಹೊರಬರಲಾಗುತ್ತಿಲ್ಲ, ಏಕೆ? ಏಕೆ?” ಮತ್ತೆ ಚೀರಿದ, ಮೇಜಿನ ಮೇಲಿದ್ದ ಪುಸ್ತಕಗಳನ್ನು ನೆಲಕ್ಕೆ ತಳ್ಳಿದ, ತಲೆಯ ಮೇಲೆ ಕೈ ಹೊತ್ತು ಕುಳಿತ.

ಕೆಳಗೆ ಬಿದ್ದ ಪುಸ್ತಕಗಳ ಮಧ್ಯದಲ್ಲಿ ಶಂಕರಾಚಾರ್ಯರ ಶಾಂತ ಮುಖ ಮುದ್ರೆಯಿರುವ ಪುಸ್ತಕವೊಂದು ಕಂಡಿತು, “ಭಜಗೋವಿಂದಮ್”…ಗಾಳಿಗೆ ಹಾರುತಿದ್ದ, ಪುಟಗಳಲ್ಲಿ…ಏನೋ ಕಂಡಂತಾಯಿತು. ಎತ್ತಿಕೊಂಡು ಓದತೊಡಗಿದ..
“ನಾರಿಸ್ತನ ಭರ ನಾಭಿ ದೇಶಂ
ದ್ರಷ್ಟ್ಟಾಮೋಘಾ ಮೋಹಾವೇಶಮ್,
ಏತನ್ಮಾಂಸವಸಾದಿ ವಿಕಾರಂ,
ಮನಸಿವಿಚಂತಯ, ವಾರಂ ವಾರಮ್..”

“ನಾರಿಯ ಗುರುಕುಚ ನಾಭಿ ದೇಶವ
ನೋಡುತ ಮೋಹಿತನಾಗದಿರು
ಅವು ಬರಿ ಮಾಂಸವಿಕಾರಗಳೆಂಬುದ
ಮತ್ತೂ, ಮತ್ತೂ, ನೆನೆಯುತಿರು.”

ಓದಿದ ನಂತರ ಪುಸ್ತಕವನ್ನು ಕೆಳಗೆ ಹಾಕಿದ. ಮೈಯೆಲ್ಲಾ ಬೆವರತೊಡಗಿತು, ದೇಹದಲೆಲ್ಲಾ ಮಿಂಚು ಸಂಚಾರವಾದಂತಾಯಿತು. ಹಾಗೆಯೇ ಬಹಳ ಹೊತ್ತು ಕುಳಿತಿದ್ದ, ತಲೆಯೊಳಗಿನ ಆಲೋಚನೆಯಲ್ಲಾ ಮಾಯವಾದಂತಾಯಿತು.
ಧಿಗ್ಗನೆ! ಎದ್ದ, ಕೋಣೆಯ ಬಾಗಿಲನ್ನು ತೆರೆದ, ಸರ ಸರ ನಡೆದ, ಹಿಂದಿರುಗಿ ನೋಡದೆಯೇ ನಡೆದ, ಹೋದ ಬಹುದೂರ ಹೋದ…….ಆಗಾಗಲೆ ಸೂರ್ಯನು ಚಿಲಿಪಿಲಿ ಹಕ್ಕಿಗಳೊಡನೆ, ಗಾಡಾಂಧಕಾರವನ್ನು ಓಡಿಸಿ ಜಗತ್ತಿಗೆಲ್ಲ, ಬೆಳಕನ್ನು ನೀಡತೊಡಗಿದ್ದನು. ರೇಡಿಯೋದಲ್ಲಿ ಹಾಡು ಮೊಳಗುತಿತ್ತು, “ಮಾನವ ಮೂಳೆ ಮಾಂಸದ………….

(My first story, which was published in ATNCC  annual  magazine)